ಹರಿಯಾಣ: ಮಾಟಮಂತ್ರ ಅಭ್ಯಾಸ ಮಾಡುತ್ತಿದ್ದಳು ಎನ್ನಲಾದ ಮಹಿಳೆಯೊಬ್ಬಳು ತನ್ನ ಪತಿಯನ್ನೇ ಕೊಲೆ ಮಾಡಲು ಯತ್ನಿಸಿದ ಆರೋಪ ಕೇಳಿಬಂದಿದ್ದು, ಘಟನೆ ಬೆಳಕಿಗೆ ಬಂದ ಬಳಿಕ ಪರಾರಿಯಾಗಲು ಯತ್ನಿಸುವಾಗ ಟೆರೇಸ್ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುರುಕ್ಷೇತ್ರದಲ್ಲಿ ನಡೆದಿದೆ.
ಆರೋಪಿಯನ್ನು 40 ವರ್ಷದ ವಿಮಲಾ ಎಂದು ಗುರುತಿಸಲಾಗಿದೆ. ಆಕೆಯ ಪತಿ ರಾಜೇಶ್ ಮೃತಪಟ್ಟಿದ್ದಾರೆ. ದಂಪತಿಗಳು ಕುರುಕ್ಷೇತ್ರದಲ್ಲಿ ಸುಮಾರು ಒಂದು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಪೊಲೀಸರ ಪ್ರಕಾರ, ಸಂಜೆ ಸುಮಾರು 5 ಗಂಟೆ ವೇಳೆಗೆ ದಂಪತಿ ಪರಸ್ಪರ ಜಗಳವಾಡುತ್ತಿರುವುದು ಮನೆಯ ಮಾಲೀಕ ರಿಂಕು ಅವರಿಗೆ ಕೇಳಿಸಿದೆ. ತಕ್ಷಣ ಮೇಲ್ಮಹಡಿಗೆ ತೆರಳಿ ನೋಡಿದಾಗ ರಾಜೇಶ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಇದೇ ವೇಳೆ ವಿಮಲಾ ಅವರ ಹೊಟ್ಟೆಯಿಂದ ಆಂತರಿಕ ಅಂಗಗಳನ್ನು ಹೊರತೆಗೆದು ಚೀಲದಲ್ಲಿ ಇಡುತ್ತಿದ್ದಳು ಎಂದು ಆರೋಪಿಸಲಾಗಿದೆ.
ಮನೆಯ ಮಾಲೀಕರನ್ನು ಕಂಡು ಭಯಭೀತಳಾದ ವಿಮಲಾ ಟೆರೇಸ್ನಿಂದ ಹಾರಿ ಪರಾರಿಯಾಗಲು ಯತ್ನಿಸಿದ್ದಾಳೆ. ಈ ವೇಳೆ ಆಕೆಗೆ ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಕುರುಕ್ಷೇತ್ರದ ಲೋಕ ನಾಯಕ್ ಜೈ ಪ್ರಕಾಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಜೇಶ್ ಅವರ ದೇಹದಲ್ಲಿ ಸುಮಾರು 35 ಸೆಂಟಿಮೀಟರ್ ಉದ್ದದ ಗಾಯ ಪತ್ತೆಯಾಗಿದ್ದು, ಘಟನಾ ಸ್ಥಳದಿಂದ ಮೂರು ಚಾಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲೂ ಹೊಟ್ಟೆಯ ಭಾಗದಲ್ಲಿ ಗಂಭೀರ ಗಾಯ ಇರುವುದು ದೃಢಪಟ್ಟಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ವಿಮಲಾ ರಾಜೇಶ್ಗೆ ಹಲವು ಬಾರಿ ಇರಿದ ಬಳಿಕ ಅವರ ಹೊಟ್ಟೆಯನ್ನು ಕತ್ತರಿಸಿ ಆಂತರಿಕ ಅಂಗಗಳನ್ನು ಹೊರತೆಗೆದಿದ್ದಾಳೆ ಎನ್ನಲಾಗಿದೆ. ರಾಜೇಶ್ ನೀರು ಸರಬರಾಜುದಾರರಾಗಿ ಕೆಲಸ ಮಾಡುತ್ತಿದ್ದರು ಮತ್ತು ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.
ಮನೆಯ ಮಾಲೀಕ ರಿಂಕು ನೀಡಿರುವ ಹೇಳಿಕೆಯಲ್ಲಿ, ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೆ, ವಿಮಲಾ ಮಾಟಮಂತ್ರವನ್ನು ಅಭ್ಯಾಸ ಮಾಡುತ್ತಿದ್ದಳು ಎಂಬ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿದೆ. ಹೀಗಾಗಿ ಪೊಲೀಸರು ವೈವಾಹಿಕ ಕಲಹದ ಜೊತೆಗೆ ಮಾಟಮಂತ್ರದ ಆರೋಪದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಆದರೆ ಈ ಕೃತ್ಯದ ನಿಖರ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಮಲಾಳ ಆರೋಗ್ಯ ಸ್ಥಿತಿ ಸುಧಾರಿಸಿದ ಬಳಿಕ ಆಕೆಯನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ರಾಜೇಶ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
