ಬೆಂಗಳೂರು: ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಗು ವೆನ್ನಿಲಾ ಕೊಲೆ ಪ್ರಕರಣ ಸಂಬಂಧ ಹಲವು ಹೊಸ ಮಾಹಿತಿಗಳು ಬೆಳಕಿಗೆ ಬರುತ್ತಿದ್ದು, ಪ್ರಕರಣದ ತನಿಖೆ ತೀವ್ರಗೊಂಡಿದೆ.
ಖಾಸಗಿ ವಿಲ್ಲಾದಲ್ಲಿ ಬಾಡಿಗೆಗೆ ವಾಸವಾಗಿದ್ದ ಮೋಹನ್ ಮತ್ತು ಪ್ರಿಯಾಂಕ ನಡುವೆ ಇದ್ದ ಸಂಬಂಧ ಹಾಗೂ ವೈಯಕ್ತಿಕ ಕಲಹಗಳು ಈ ಘಟನೆಗೆ ಹಿನ್ನೆಲೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೂಲಗಳ ಪ್ರಕಾರ, ಪ್ರಿಯಾಂಕ ಅವರ ಜೀವನದಲ್ಲಿ ಪುನಃ ಪ್ರವೇಶ ಪಡೆದ ನಂತರ ಮೋಹನ್ ಅವರು ಕಳೆದ ಜನವರಿಯಲ್ಲಿ ಕಾಡುಗೋಡಿಯ ಚಿಕ್ಕಬನಹಳ್ಳಿ ರಸ್ತೆಯಲ್ಲಿರುವ ವಿಲ್ಲಾಕ್ಕೆ ಸ್ಥಳಾಂತರಗೊಂಡಿದ್ದರು. ನವೆಂಬರ್ನಲ್ಲಿ ಇಬ್ಬರ ನಡುವೆ ಮತ್ತೆ ಪರಿಚಯವಾಗಿದ್ದು, ನಂತರ ಡಿಸೆಂಬರ್ ಕೊನೆ ವಾರದಲ್ಲಿ ಇಬ್ಬರೂ ಕಾಶಿಗೆ ತೆರಳಿ ವಾಪಸ್ ಬಂದಿದ್ದರು ಎಂದು ತಿಳಿದು ಬಂದಿದೆ.
ಜನವರಿ 13ರಂದು ವೈವಾಹಿಕ ಸಂಬಂಧ ಸಂಬಂಧಿತ ವಿಚಾರದಲ್ಲಿ ಕೋರ್ಟ್ನಲ್ಲಿ ಡೈವರ್ಸ್ ಪ್ರಕ್ರಿಯೆಗೂ ಅರ್ಜಿ ಸಲ್ಲಿಕೆಯಾಗಿದ್ದರೂ, ಗಂಡ ಪ್ರವೀಣ್ ಸಹಿ ಹಾಕಲು ನಿರಾಕರಿಸಿದ್ದಾನೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಬಳಿಕ ಮಕ್ಕಳ ವಿಚಾರವನ್ನು ಮುಂದಿಟ್ಟು ಸಹಿ ಪಡೆದುಕೊಳ್ಳಲಾಗಿತ್ತು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.
ನಂತರ ಪ್ರಿಯಾಂಕ ತಮ್ಮ ಮಗಳನ್ನು ದಾವಣಗೆರೆಯಲ್ಲಿ ಬಿಟ್ಟು, ಕಿರಿಯ ಮಗು ವೆನ್ನಿಲಾ ಜೊತೆ ಬೆಂಗಳೂರಿಗೆ ಆಗಮಿಸಿ ಮೋಹನ್ ಜೊತೆ ವಿಲ್ಲಾದಲ್ಲಿ ವಾಸವಾಗಿದ್ದರು ಎಂದು ಹೇಳಲಾಗುತ್ತಿದೆ.
ಮಾರ್ಚ್ 24ರಂದು ನಡೆದ ಘಟನೆ ವೇಳೆ, ಕುಟುಂಬದ ಒಳಜಗಳ ಹಾಗೂ ವೈಯಕ್ತಿಕ ಸಂಬಂಧಗಳ ಹಿನ್ನೆಲೆ ತೀವ್ರ ತಿರುವು ಪಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಲ್ಲಾ ಬಳಿ ಮೋಹನ್ ಪತ್ನಿಯೂ ಬಂದು ಗಂಡನ ಜೊತೆ ಜಗಳ ಮಾಡಿಕೊಂಡಿದ್ದು, ಈ ವಿಚಾರವಾಗಿ ಕುಟುಂಬದಲ್ಲಿ ಗಂಭೀರ ವಿವಾದ ಉಂಟಾಗಿತ್ತು ಎಂದು ತಿಳಿದು ಬಂದಿದೆ.
ಜಗಳದ ಬಳಿಕ ಕೆಲ ದಿನಗಳಲ್ಲೇ ಮಗು ವೆನ್ನಿಲಾ ಕೊಲೆ ನಡೆದಿರುವುದಾಗಿ ಆರೋಪಿಸಲಾಗಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೋಡಿ ಪೊಲೀಸರು ತನಿಖೆ ಮುಂದುವರೆಸಿದ್ದು, ವಿಲ್ಲಾ ಸಿಬ್ಬಂದಿ ಹಾಗೂ ಸಂಬಂಧಿತ ವ್ಯಕ್ತಿಗಳ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಎಲ್ಲ ಆಯಾಮಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
