ಬೆಂಗಳೂರು (Bengaluru) ನಗರದ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಮಗು ಕೊಲೆ ಪ್ರಕರಣ (Child Murder Case) ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ತಾಯಿ ಮತ್ತು ಆಕೆಯ ಪ್ರಿಯಕರನಿಂದಲೇ ಮಗುವನ್ನು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಮೂವರು ಪೊಲೀಸ್​ ಅಧಿಕಾರಿಗಳನ್ನು ಸಸ್ಪೆಂಡ್​ (Suspend) ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರಿಂದ ತನಿಖಾ ಲೋಪ ನಡೆದಿದೆ ಎಂದು ಪತ್ತೆಯಾದ ನಂತರ, ಮೂವರು ಪೊಲೀಸರನ್ನು ಅಮಾನತುಗೊಳಿಸಿರುವ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಮಾರ್ಚ್ ತಿಂಗಳಲ್ಲಿ ಈ ವೆನ್ನೆಲಾ ಎಂಬ ಮಗು ಸಾವನಪ್ಪಿತ್ತು. ಆಗ ಈ ಪ್ರಕರಣವನ್ನು ಸಾಮಾನ್ಯ ಮರಣ (UDR – Unnatural Death Report) ಎಂದು ದಾಖಲಿಸಲಾಗಿತ್ತು. ಅಂದರೆ, ಮರಣದ ಕುರಿತು ಸಂಶಯಾಸ್ಪದ ಪರಿಸ್ಥಿತಿ ಇದ್ದರೂ, ಅದನ್ನು ಕೊಲೆ ಪ್ರಕರಣವಾಗಿ ಆಗಲೇ ಪರಿಗಣಿಸಲಾಗಿಲ್ಲ. ಹೀಗಾಗಿ ಪೊಲೀಸರಿಂದ ತನಿಖಾ ಲೋಪ ಎಂದು ಹೇಳಲಾಗಿದೆ.

ಕೇಸ್​​​ನಲ್ಲಿ ತನಿಖೆ ಲೋಪ, ಮೂವರು ಅಧಿಕಾರಿಗಳು ಸಸ್ಪೆಂಡ್​​!

ಸದ್ಯ ಹೆಚ್ಚಿನ ಮಾಹಿತಿ ಮತ್ತು ಶಂಕೆಗಳ ಹಿನ್ನೆಲೆಯಲ್ಲಿ ಜೂನ್ 4 ರಂದು ಈ ಪ್ರಕರಣವನ್ನು ಮರ್ಡರ್ ಕೇಸ್ ಆಗಿ ದಾಖಲಿಸಲಾಗಿದೆ. ಮಗು ಸಾವಿನ ಬಗ್ಗೆ ಮೊದಲಿನಿಂದಲೇ ಸೂಕ್ತ ತನಿಖೆ ನಡೆಸಬೇಕಿದ್ದ ಅಧಿಕಾರಿಗಳು ಅದನ್ನು ಸರಿಯಾಗಿ ಕೈಗೆತ್ತಿಕೊಳ್ಳದಿರುವುದು ಈಗ ದೊಡ್ಡ ಪ್ರಶ್ನೆಯಾಗಿದ್ದು, ಇದೇ ಕಾರಣಕ್ಕೆ ತನಿಖಾ ಲೋಪ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ಸಟೇಬಲ್‌ ಸಸ್ಪೆಂಡ್ 

ಈ ಲೋಪದ ಹಿನ್ನೆಲೆಯಲ್ಲಿ ಕಾಡುಗೋಡಿ ಠಾಣೆಯ ಅಂದಿನ ಇನ್ಸ್ಪೆಕ್ಟರ್ ರಂಗಸ್ವಾಮಿ, ಪಿಎಸ್ಐ ನಿಂಗರಾಜು ಮತ್ತು ಒಬ್ಬ ಹಳೇಶ್ ಕಾನ್ಸ್‌ಟೇಬಲ್‌ರನ್ನು ಅಮಾನತು ಮಾಡುವ ಆದೇಶ ಹೊರಡಿಸಲಾಗಿದೆ. ಇವರ ವಿರುದ್ಧ ಇಲಾಖಾ ಮಟ್ಟದಲ್ಲಿ ಹೆಚ್ಚಿನ ತನಿಖೆ ನಡೆಯಲಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಅಧಿಕಾರಿಗಳು ಏಕೆ ಸರಿಯಾದ ಸಮಯದಲ್ಲಿ ಕ್ರಮ ಕೈಗೊಂಡಿಲ್ಲ, ಅವರ ಉದ್ದೇಶ ಏನು, ನಿರ್ಲಕ್ಷ್ಯವೋ ಅಥವಾ ಇನ್ನೇನಾದರೂ ಕಾರಣವೋ ಎಂಬುದನ್ನು ಈಗ ಪೊಲೀಸರು ವಿವರವಾಗಿ ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣದ ಮುಂದಿನ ತನಿಖೆಯನ್ನು ಈಗ ಬೇರೆ ಅಧಿಕಾರಿಗೆ ಹಸ್ತಾಂತರಿಸಲಾಗಿದೆ.
Share.
Leave A Reply

Exit mobile version