ಸಹ ವಿದ್ಯಾರ್ಥಿಯನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ; ಐವರು ಸ್ನೇಹಿತರ ಮೇಲೂ ಪ್ರಕರಣ ದಾಖಲು

ಬೆಂಗಳೂರು: ಓವರ್‌ಟೇಕ್ ಮಾಡಿದ ವಿಚಾರಕ್ಕೆ ಆರಂಭವಾದ ಜಗಳವೊಂದು ಹಲ್ಲೆ ಪ್ರಕರಣಕ್ಕೆ ತಿರುಗಿದ್ದು, ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿಜಯ್ ಸೇರಿದಂತೆ ಐವರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಸಹ ವಿದ್ಯಾರ್ಥಿ ಮನೀಷ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಸಾಮ್ರಾಟ್ ವಿಜಯ್, ಸಮೃದ್ದ್ ಸಿಂಹ, ವಿಶ್ವಾಸ್ ಸುಚಿ, ಸ್ಕಂದ ವೆಂಕಟೇಶ್ ಹಾಗೂ ಸಮೀದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ BNS ಸೆಕ್ಷನ್ 115(2), 118(1), 352, 351(2), 3(5) ಹಾಗೂ 137(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಓವರ್‌ಟೇಕ್‌ನಿಂದ ಶುರುವಾದ ಗಲಾಟೆ!

ಮಾಹಿತಿಯ ಪ್ರಕಾರ, ಸೋಮವಾರ ಸಂಜೆ ಸಾಮ್ರಾಟ್ ವಿಜಯ್ ತಮ್ಮ ಸ್ನೇಹಿತರೊಂದಿಗೆ ಜಿಪ್ಸಿ ಕಾರಿನಲ್ಲಿ ತೆರಳುತ್ತಿದ್ದರು. ಇದೇ ಸಂದರ್ಭದಲ್ಲಿ ಮನೀಷ್ ಗೌಡ ಹಾಗೂ ಅವರ ಸ್ನೇಹಿತರು ಐ20 ಕಾರಿನಲ್ಲಿ ಬರುತ್ತಿದ್ದು, ಸಾಮ್ರಾಟ್ ಪ್ರಯಾಣಿಸುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡಿದ್ದಾರೆ ಎನ್ನಲಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕಾರಿನಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಸಾಮ್ರಾಟ್ ವಿಜಯ್ ಹಾಗೂ ಅವರ ಸ್ನೇಹಿತರು ಮನೀಷ್ ಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

‘ಸಫಾರಿ ಕಾರಿನಲ್ಲಿ ಬಂದು ಕರೆದೊಯ್ದು ಹಲ್ಲೆ’ ಆರೋಪ!

ಮನೀಷ್ ಗೌಡ ಪರ ವಕೀಲ ಮಂಜುನಾಥ್ ಅವರ ಆರೋಪದ ಪ್ರಕಾರ, ಓವರ್‌ಟೇಕ್ ವಿಚಾರಕ್ಕೆ ಹಿಂದಿನ ದಿನ ಗಲಾಟೆ ನಡೆದಿದ್ದು, ಮರುದಿನ ಸಫಾರಿ ಕಾರಿನಲ್ಲಿ ಬಂದ ಕೆಲವರು ಮನೀಷ್ ಅವರನ್ನು ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

“ಆರು ಜನ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಆರು ಜನರ ವಿರುದ್ಧ ದೂರು ನೀಡಲಾಗಿದೆ. ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂಧಿಸಿದಂತೆ ಕೆಲ ಗೊಂದಲಗಳಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸುವ ಭರವಸೆ ನೀಡಿದ್ದರು” ಎಂದು ವಕೀಲ ಮಂಜುನಾಥ್ ತಿಳಿಸಿದ್ದಾರೆ.

ತನಿಖೆ ಬಳಿಕ ಸತ್ಯಾಂಶ ಹೊರಬರಬೇಕಿದೆ!

ಈ ಪ್ರಕರಣದಲ್ಲಿ ಅಪಹರಣ, ಹಲ್ಲೆ ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದು, ಸದ್ಯ ಪೊಲೀಸರು FIR ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಸಂಪೂರ್ಣ ಸತ್ಯಾಂಶ ತನಿಖೆಯ ಬಳಿಕವೇ ಹೊರಬರಬೇಕಿದೆ.

ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಅವರನ್ನು ಕಾನೂನಿನ ದೃಷ್ಟಿಯಲ್ಲಿ ನಿರ್ದೋಷಿಗಳೆಂದು ಪರಿಗಣಿಸಲಾಗುತ್ತದೆ.

Share.
Leave A Reply

Exit mobile version