ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ಮತ್ತೊಂದು ಕಂಟಕ ಎದುರಾಗುವ ಸಾಧ್ಯತೆ ಮೂಡಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್, ದರ್ಶನ್ ಹಾಗೂ ಪವಿತ್ರಾ ಗೌಡ ವಿರುದ್ಧ ಸಾಕ್ಷ್ಯ ಹೇಳಲು ಸಿದ್ಧರಾಗಿರುವ ಹಿನ್ನೆಲೆಯಲ್ಲಿ ‘ಮಾಫಿ ಸಾಕ್ಷಿ’ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಪ್ರಕ್ರಿಯೆಗೆ ಕೋರ್ಟ್ ಅನುಮತಿ ನೀಡಿದ್ದು, ಮುಂದಿನ ಹಂತದಲ್ಲಿ ಅವರ ಹೇಳಿಕೆ ದಾಖಲಾಗಲಿದೆ.
ಈ ಬೆಳವಣಿಗೆಯ ನಡುವೆ ಹಿರಿಯ ವಕೀಲ ಶಂಕರಪ್ಪ ಅವರು ‘ಮಾಫಿ ಸಾಕ್ಷಿ’ ಪ್ರಕ್ರಿಯೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
‘ಸ್ವಲ್ಪ ಉಲ್ಟಾ ಹೊಡೆದರೆ ಡಬಲ್ ಸಮಸ್ಯೆ’
ಮಾಫಿ ಸಾಕ್ಷಿಯಾಗುವುದು ಅಂದುಕೊಂಡಷ್ಟು ಸುಲಭದ ಪ್ರಕ್ರಿಯೆಯಲ್ಲ ಎಂದು ಹಿರಿಯ ವಕೀಲ ಶಂಕರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯ ಅದರ ಕುರಿತು ವಿಚಾರಣೆ ನಡೆಸುತ್ತದೆ. ಈ ವೇಳೆ ಆರೋಪಿ ಮತ್ತೊಬ್ಬರನ್ನು ಸಿಕ್ಕಿಸುವ ಉದ್ದೇಶದಿಂದ ಒತ್ತಡ, ಆಮಿಷ ಅಥವಾ ಪ್ರಚೋದನೆಯಿಂದ ಹೇಳಿಕೆ ನೀಡಿದರೆ ಸಮಸ್ಯೆ ಎದುರಾಗಬಹುದು ಎಂದು ತಿಳಿಸಿದ್ದಾರೆ.
ಚಾರ್ಜ್ಶೀಟ್ ಸಲ್ಲಿಕೆಯಾದ ಬಳಿಕವೂ ಅಪ್ರೂವರ್ ಅರ್ಜಿ ವಿಚಾರಣೆ ನಡೆಯಬಹುದು. ನ್ಯಾಯಾಲಯವು ನೀಡುವ ಹೇಳಿಕೆ ಹಾಗೂ ಪ್ರಕರಣದ ಇತರ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತದೆ ಎಂದು ಅವರು ವಿವರಿಸಿದ್ದಾರೆ.
‘ಮಾಫಿ ಸಾಕ್ಷಿ’ ಸುಲಭದ ದಾರಿ ಅಲ್ಲ
ಮಾಫಿ ಸಾಕ್ಷಿ ಪದ್ಧತಿ ಹೊಸದೇನಲ್ಲ. ಬ್ರಿಟಿಷರ ಕಾಲದಿಂದಲೂ ಈ ವ್ಯವಸ್ಥೆ ಜಾರಿಯಲ್ಲಿದೆ. ನಿಜವಾದ ಅಪರಾಧದಲ್ಲಿ ಭಾಗಿಯಾಗದ ವ್ಯಕ್ತಿಯನ್ನು ರಕ್ಷಿಸುವುದು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಸಾಕ್ಷ್ಯ ಪಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಶಂಕರಪ್ಪ ಹೇಳಿದ್ದಾರೆ.
ಆದರೆ, ಇತ್ತೀಚಿನ ದಿನಗಳಲ್ಲಿ ‘ಮಾಫಿ ಸಾಕ್ಷಿ’ ಎಂಬುದು ಸುಲಭವಾದ ಮಾರ್ಗ ಎಂಬ ರೀತಿಯಲ್ಲಿ ಕಾಣಲಾಗುತ್ತಿದೆ. ವಾಸ್ತವದಲ್ಲಿ ಇದು ಅಷ್ಟು ಸುಲಭವಲ್ಲ. ಮೊದಲು ಪೊಲೀಸ್ ಠಾಣೆಯಲ್ಲಿ ನೀಡಿರುವ ಹೇಳಿಕೆ, ಬಳಿಕದ ಕಸ್ಟಡಿ ಪ್ರಕ್ರಿಯೆ ಹಾಗೂ ನ್ಯಾಯಾಲಯದಲ್ಲಿ ದಾಖಲಾದ ಹೇಳಿಕೆ ಸೇರಿದಂತೆ ಹಲವು ಅಂಶಗಳನ್ನು ನ್ಯಾಯಾಲಯ ಪರಿಗಣಿಸುತ್ತದೆ. 164ರ ಹೇಳಿಕೆ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಪರಿಶೀಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅಂತಿಮವಾಗಿ ಮಾಫಿ ಸಾಕ್ಷಿ ಅರ್ಜಿಯನ್ನು ಒಪ್ಪಬೇಕೇ ಅಥವಾ ಬೇಡವೇ ಎಂಬುದು ನ್ಯಾಯಾಧೀಶರ ವಿವೇಚನೆಗೆ ಒಳಪಟ್ಟಿರುತ್ತದೆ. ಒತ್ತಡ ಅಥವಾ ಆಮಿಷದಡಿ ಹೇಳಿಕೆ ನೀಡಿರುವುದು ಕಂಡುಬಂದರೆ ಅದರ ಪರಿಣಾಮವೂ ಎದುರಾಗಬಹುದು ಎಂದು ಶಂಕರಪ್ಪ ತಿಳಿಸಿದ್ದಾರೆ.
ವಿಚಾರಣೆಯಿಂದ ಪವಿತ್ರಾ ಗೌಡಗೆ ಅನಾರೋಗ್ಯ?
ಇತ್ತ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆಯಿಂದಾಗಿ ಜೈಲಿನಲ್ಲಿರುವ ಪವಿತ್ರಾ ಗೌಡ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದಾರೆ ಎನ್ನಲಾಗಿದೆ. ಅನಾರೋಗ್ಯದ ಕಾರಣದಿಂದ ಅವರು ಇತ್ತೀಚಿನ ವಿಚಾರಣೆಗೆ ಗೈರಾಗಿದ್ದರು.
ಈ ನಡುವೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪವಿತ್ರಾ ಗೌಡ ಅವರನ್ನು ಭೇಟಿಯಾಗಿದ್ದಾರೆ. ಪವಿತ್ರಾ ಗೌಡ ತುಂಬಾ ಡಿಸ್ಟರ್ಬ್ ಆಗಿರುವುದಾಗಿ ತಿಳಿಸಿರುವ ಅವರು, ಆಕೆಯನ್ನು ತಮ್ಮ ಮಗಳಂತೆ ಕಾಣುವುದಾಗಿ ಹೇಳಿದ್ದಾರೆ. ನೋವಿನಲ್ಲಿರುವ ಮನಸ್ಸುಗಳನ್ನು ಮತ್ತಷ್ಟು ನೋಯಿಸಬಾರದು ಎಂಬ ಮನವಿಯನ್ನೂ ಮಾಡಿದ್ದಾರೆ.
ಒಟ್ಟಿನಲ್ಲಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಅವರ ‘ಮಾಫಿ ಸಾಕ್ಷಿ’ ಹೇಳಿಕೆ ಮುಂದಿನ ದಿನಗಳಲ್ಲಿ ಪ್ರಕರಣದ ದಿಕ್ಕಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ.
